ಭಾನುವಾರ, ಮಾರ್ಚ್ 20, 2011

ಮಹರ್ಷಿ ವಾಲ್ಮೀಕಿಯ ಮೊದಲ ಶ್ಲೋಕ ಬರೆದ ಸಂಧರ್ಭವ ವಸ್ತುವಿಟ್ಟು ಬರೆದಿದ್ದೇನೆ:

ನೀರ ತಿಳಿ ತೊರೆಗಳ ನಿನಾದದ-
ಪಾರ ಹಸಿರಿನ ಶಾಲಗಳ ವಿ-
ಸ್ತಾರ ವನಗಳು ಚಿತ್ರಕೂಟದ ಸೊಭಗ ಮೆರೆಸಿಹವು ||
ಧೀರ ಮುನಿಗಳ ಶಾಂತ ತಪಗಂ-
ಭೀರ ಯಜ್ಞ್ಯದ ಕಾರ್ಯವಲ್ಲದೆ
ದೂರ ದೇಶದ ವಲಸೆ ಪಕ್ಷಿಗಳನ್ನು ಸೆಳೆಯುತಲಿ || ೧ ||

ದ್ರುಮಗಳಡಿಯಲೆ ತಮಸೆ ತಟದಾ-
ಶ್ರಮದೆ ವಾಲ್ಮೀಕಿಮುನಿ ಜಪತಪ
ಕ್ರಮದೆ ನಡೆಸುತ ಹಲವು ವರ್ಷಗಳಲ್ಲೆ ಕಳೆದಿಹನು ||
ಶ್ರಮದೆ ಯೋಜನೆಗಳನು ದಾಟುತ
ಕ್ರಮದೆ ಸ್ಥಳ ಪರಕಿಸಲು ಇದೆವಿ-
ಶ್ರಮಕೆ ಯೋಗ್ಯವನೆಂದು ಕ್ರೌಂಚಗಳೆರಡರಭಿಮತವು || ೨ ||

ಶಾಲದತಿ ಎತ್ತರದ ಮರದಲಿ
ಮೇಲೆ ಬಲಯುತ ಕೊಂಬೆಯಾರಿಸಿ
ನೀಲ ಕ್ರೌಂಚಗಳೊಂದುಗೂಡನು ಮುದದೆ ಕಟ್ಟಿದವು ||
ನೀಳ ಕತ್ತುಗಳೊಂದರೊಂದಿಗೆ
ವಾಲಿಸುತ ತೊರ್ಪಡಿಸೆ ಪ್ರೀತಿಯ
ಲೀಲೆಯನುದಿನ ನೋಡುತಿದ್ದನು ಮುನಿಯು ಸಂಭ್ರಮದಿ || ೩ ||

ಹಾರುತಿರೆ ರೆಕ್ಕೆಗಳ ತುದಿಗಳು
ನೀರ ಸೋಕಿಸೆ ಸಣ್ಣ ಅಲೆಗಳ
ನೇರ ರೇಖೆಗಳೆರಡುಕಡೆಯಲು ಚಂದ ಕಾಣುವುದು ||
ಕೀರಲಿನ ಭಾಷೆಯದದಾದರು
ಸಾರವದ್ಭಾವನೆಯ ಕೇಕೆಗೆ
ಸೂರೆಗೊಂಡನು ಮುನಿಯು ಪ್ರಕೃತಿಯ ರೀತಿಗಳ ಕಂಡು || ೪ ||

ಶಾಲಮರದೆಡೆ ಮುನಿಯು ನೋಡಲು
ಮಾಲೆಯೆನೆ ಕೊರಳುಗಳ ಹೆಣೆದಿಹ
ಕಾಲವನೆ ಮರೆತಿರುವ ಮಿಥುನದ ಕ್ರೌಂಚಗಳ ಕಂಡ ||
ಶೂಲದಂತಹ ಬಾಣವೊಂದನು
ವ್ಯಾಲನೊಬ್ಬನು ಬಳೆಸೆ ಕತ್ತಿನ
ಮೋಲ ಸೀಳಿತು ಗಂಡು ಪಕ್ಷಿಯ ಪ್ರಾಣ ಹಾರಿಸುತ || ೫ ||

ಹೆಣ್ಣು ಗಾಬರಿಯಿಂದ ಹಾರುತ
ಮಣ್ಣಿನಾಸರೆ ಪಡೆದು ರಕ್ತದ
ಬಣ್ಣ ಹರೆಡಿಹ ತನ್ನ ನಲ್ಲನ ದೇಹ ಸೇರುತಲಿ ||
ತಣ್ಣಗಿನ ಕೊರಳನ್ನು ತೀಡುತ
ಸಣ್ಣಗಿನ ಅಳಲನ್ನು ಹೊರಡಿಸೆ
ಕಣ್ಣು ಮಂಜಾಗುತಲಿ ಮುನಿವರ "ಒಡನೆ ಶಪಿಸಿದನು" || ೬ ||

~~~~~~~~~~~~

4 ಕಾಮೆಂಟ್‌ಗಳು:

  1. ರಾಮಣೀಯಕ ಸ್ವಾತ್ಮಭಾವದ
    ಸೋಮಶೇಖರ ಸಖ ಚರಿತ್ರಾ
    ಭೂಮಿಕೆಯ ಕಲ್ಪನೆ ಮನೋಹರ ಭಾಮಿನೀಪ್ರಿಯರೇ

    ಪ್ರತ್ಯುತ್ತರಅಳಿಸಿ