ಮಂಗಳವಾರ, ಮಾರ್ಚ್ 29, 2011

ಒಂದು ವಿರಕ್ತ ಸುನೀತ

ಅಲೆದಲೆದು ಸುಸ್ತಾಗಿ ಮನುಜ ಕಟ್ಟಿದ ಗೂಡು
ಗಳು ಸೇರಿ ಒಟ್ಟಂದದಲಿ ಪೇಟೆಯಾಯ್ತಲ್ಲ!
ಕಲೆತು ಮಲೆತರು ನರರು ನೆಲೆಯೂರಬೇಕಲ್ಲ,
ಬೆಲೆ ಕಟ್ಟಿದರು ಮಲಗಲಡಿಯ ಲೆಕ್ಕದಲಿ.


ಪ್ಲಾಟಿನಂ ಚಿನ್ನ ನಗ ಕಾರು ಬಂಗಲೆ ಬೇಕು
ಸ್ಲೇಟದಿನ್ನೆಲ್ಲಿಯದು ಲ್ಯಾಪ್ ಟಾಪು ಹಣೆಬರವು
ಪ್ಲೇಟು ಬಂದಿತು ಬಾಳೆಮರಗಳೋ ಬಾಗಿದವು
ಕಾಟು ಮೇಲ್ ಕುರ್ಲಾನೆ ಪ್ರಸ್ಥವಾಗಲು ಬೇಕು.


ನಾಗರೀಕರೊ ನಾಗರಿಕರೊ, ಪಾಣಿನಿಯೆಲ್ಲಿ?
ನಾಗಮಂಡಲಪಾತ್ರಿ ಕುಣಿಯುವುದ ಮರೆತಂತೆ
ಭೋಗ-ರೋಗದ ಯೋಗ ಕಡೆಗಂತೆ ಮಡಿಕಂತೆ
ಕಾಗುಣಿತ ಕ್ಯಾ ಕುಣಿತ, ಕ್ಯಾಲ್ಕುಲೇತರದೆಲ್ಲಿ?


ಬರಿಕಾಲು ಬಿಳಿಶಾಲು ಹೊದ್ದು ಹೊರಡುವ ಬಾರ
ಪೇಟೆತೀಟೆಯು ಸಾಕು, ಅರಿವ ಮಣ್ಣಿನ ಸಾರ.

2 ಕಾಮೆಂಟ್‌ಗಳು: