ಶನಿವಾರ, ಏಪ್ರಿಲ್ 9, 2011

ಜನ ಲೋಕಪಾಲ ನಿಯಮ - ಅಣ್ಣ ಹಜಾರೆ


ಲಂಚ ಕೋರರು ಮೆರೆವ ಸಡಗರ
ವಂಚನೆಯು ತಾರಕವನೇರಿರೆ
ಕೊಂಚವೇ ನಿರ್ಭಿಡೆಯು ಜನರಿಗದಿಲ್ಲವೇನಕಟ ||
ಸಂಚು ಮಾಡಿಹ ಕಳ್ಳ ಕೊರಮರ
ಹೊಂಚಿ ದೋಚುವ ಹೀನ ಮನುಜರ
ನಂಚಿನಿಂ ಬಂಧಿಸಲದಾಶಿಪ ಸಾಸಿರೆಗೆ* ನಮನ || ೧ ||

ಸಾಕು ಸಾಕೆಂದಾದ ಸಮಯದಿ
ಲೋಕದುನ್ನತಿ ಶೋಕಿಸುತಲಿರೆ
ಮೂಕದನಿಗಳಲುದಯಿಸಿದನೀ ರಂಧ್ರದೊಂಗಿರಣ ||
ಲೋಕಪಾಲದ ನಿಯಮ ಜನತೆಯ
ಬೇಕು ಬೇಡಗಳನಳವಡಿಸಿರೆ
ಹಾಕಲಿರುವುದು ಹುಚ್ಚು ಕುದುರೆಗೆ ಭಯದ ಕಡಿವಾಣ || ೨ ||

*ಸಾಸಿರೆ = ಹಜಾರೆ :-)
[ಇಷ್ಟವಿದ್ದವರು ಇದನ್ನು ಇನ್ನೂ ಮುಂದುವರಿಸಿ - ಸಾಕಷ್ಟು ಬೆಳೆಸಬಹುದು]

- ರಾಮಚಂದ್ರ

9 ಕಾಮೆಂಟ್‌ಗಳು:

  1. ರಾಮ್,

    ಸಾಸಿರೆ = ಹಜಾರೆ ನನಗೆ ಮೊದಲು ಅರ್ಥ ಆಗ್ಲಿಲ್ಲ. ಈಗ ಗೊತ್ತಾಯ್ತು :) ಚೆನ್ನಾಗಿದೆ ನಾಮ ಪದವನ್ನೇ ಭಾಷಾಂತರಿಸಿದ್ದೀರಲ್ಲ!!!

    ಇಷ್ಟು ವರುಷಗಳಾಡಳಿತದಲಿ
    ನಷ್ಟದಾರ್ಥಿಕ ಸಮಯದಲಿ ಜನ
    ಕಷ್ಟ ಜೀವನ ನಡೆಸುತಿರುವುದ ಕಂಡು ರೋಚ್ಚೆದ್ದ |
    ಭ್ರಷ್ಟ ಕರಿಮಸಿ ರಾಷ್ಟ್ರ ಮಾತೆಗೆ-
    ಯೆಷ್ಟೊ ಬಳೆದಿಹ ಸಚಿವರನುಜನ-
    ಕಿಷ್ಟ ನಿಯಮದೆ ನ್ಯಾಕೆಳುಯುವ "ಲೋಕಪಾಲ"ಕೆ ಜೈ ||

    ಪ್ರತ್ಯುತ್ತರಅಳಿಸಿ
  2. ನ್ಯಾಕೆಳೆಯುವ should be read as ನ್ಯಾಯಕೆಳೆಯುವ :)

    ಪ್ರತ್ಯುತ್ತರಅಳಿಸಿ
  3. ಯಾರಿವನು? ಅಣ್ಣಾಹಜ಼ಾರೆಯ
    ದಾರಿಹರು ಬೆಂಬಲಕೆ? ಹಣ ಅಧಿ-
    ಕಾರವಿಲ್ಲದೆ, ಯೆಂದು ಕಡೆಗಣಿಸಿತ್ತು ಸರ್ಕಾರ |
    ಊರುಪ್ರಾಂತ್ಯಗಳಿಂದ ಯುವಜನ
    ವಾರಿಧಿಯದಾಂದೋಲನದೊಳಿರೆ
    ಊರಿ ಮಂಡಿಯ ಮುಗ್ಗರಿಸಿತೈ ಬಂಡವಾಳದಹಂ ||


    ಸತ್ಯನಿಷ್ಟೆ ಯಹಿಂಸೆಯೆರಡೇ
    ತತ್ವ, ಸರಳತೆ ಬಂಡವಾಳವು
    ನಿತ್ಯ ಭ್ರಷ್ಟತೆ ಧೂಳಿಪಟ ಗೈವಂಥ ನಿಜಶಕ್ತಿ |
    ಪಥ್ಯವಾಗಲಿ ಮಾರ್ಗ ಋಜುತೆಯ
    ನೆತ್ತಿನಿಲಿಸಲಿ ದೇಶದೆಲ್ಲೆಡೆ
    ಹೊತ್ತಿಸಲಿ ಯೀಜಾಗೃತಿಯ ನಣ್ಣಾಹಜ಼ಾರೆ ಮಹಾನ್ ||

    ಪ್ರತ್ಯುತ್ತರಅಳಿಸಿ
  4. ಎಳೆಯ ಜನಗಳ, ಹಳೆಯ ತಲೆಗಳ
    ಲೊಳಗೆ ಗಿಡಿದಿದ್ದೆಲ್ಲ ಬೇಗುದಿ
    ಬಳನೆ ಹರಿಯಲು ದಾರಿ ಮಾಡಿದನಣ್ಣನೀ ಸುದಿನ |
    ಹಳೆಯ ಮೌಲ್ಯಕೆ ಹೊಸತು ನೆತ್ತರು
    ಕೆಳಗೆ ಬಿದ್ದುರುಳಿದ್ದ ಶೌರ್ಯವ
    ತಳೆದ ನಿರ್ವೀರ್ಯಾದಿ ಸ್ಥಿತಿಗಳ ಪುಳಕದೆಚ್ಚರಿಸಿ ||

    ಪ್ರತ್ಯುತ್ತರಅಳಿಸಿ
  5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  6. ಗೋವಿನ ಹಾಡಿನ ಮಟ್ಟಿನಲ್ಲಿ:-)

    ಜನರ ನಿರ್ವೀರ್ಯತೆಗೆ ಲೇಹ್ಯವ* (energizer)
    ನಾಯಕರಭ್ರಷ್ಟತೆಗೆ ವ೦ಕಿಯ* (contraceptive)
    ಹಲ್ಲ ತುದಿಯಿಹ ಸಿಟ್ಟಿಗರ್ಥವ
    ನೀಡಿ ಕುಳಿತಿಹ ನಣ್ಣನೂ |

    ಹಸಿದ ಹೊಟ್ಟೆಗೆ ಖಾಲಿ ಹೊಟ್ಟೆಯ
    ಲಿರುತ ನೀಡಿದ ಮೌನ ದೇಟನು
    ಭರ್ತಿಯಾದರು ಹಿಡಿಯುವುದರವು
    ಕಲಿಯ ಬಲ್ಲುದೆ ಪಾಠ ವಾ ||

    ಮೊದಲ ಹೆಜ್ಜೆಯಿ ದಷ್ಟೆ ಮು೦ದಿದೆ
    ಕಲ್ಲು ಮುಳ್ಳಿನ ನೂರು ಯೋಜನ
    ಮೈಚ ಳಿಯಬಿಟ್ಟೇಳ ಬೇಕಿದೆ
    ತೊಡೆಯು ತಾಲಸ್ಯ ||

    ಅಣ್ಣ ಹಾಕಿದ ದಾರಿ ಮು೦ದಿದೆ
    ಮಣ್ಣ ಜನಬೆ೦ಬಲವು ಹಿ೦ದಿದೆ
    ಮಣ್ಣ ಋಣವದು ತೀರ ಲೋಸುಗ
    ಕಣ್ಣ ಮುಚ್ಚದೆ ದುಡಿಯುವಾ ||

    ಪ್ರತ್ಯುತ್ತರಅಳಿಸಿ
  7. ಓ ಅಣ್ಣ ಹಜಾರೆ ,
    ಹಿ೦ದಿದೆ ಯುವಕರ ದ೦ಡು ಹಜಾರೆ !
    ಆಸೆಯೂ ಹಜಾರೆ !
    ಆಕಾ೦ಕ್ಶೆಯೂ ಹಜಾರೆ !

    ನೀ ಅನ್ನ,ನೀರು ಬಿಟ್ಟ ದಿನ
    ನಾನೂ, ಅವನೂ, ಅವಳೂ,
    ಹೀಗೆ ಉಪವಾಸ ಕೂತವರೂ ಹಜಾರೆ !

    ವೋಟು ಕೊಟ್ಟಿದ್ದು,
    ತೆರಿಗೆ ಕಟ್ಟಿದ್ದು,
    ಕೂಲ್ ಆಗಿದ್ದು
    ಫೂಲ್ ಆಗಿದ್ದೂ ಹಜಾರ್ ಹಜಾರೆ !

    ನಿತ್ಯ ಭ್ರಷ್ಟರ,
    ಲ೦ಚಕೋರರ
    ಕೊ೦ಚ ನಡುಗಿಸ
    ಲೋಕಪಾಲರ
    ಹುಟ್ಟು ಕ್ರಿಯೆಗೆ
    ನಮ್ಮ ಹಾಜರ್ ಹಜಾರ್ ಹಜಾರೆ !


    (*ಹಜಾರೆ = ಸಾವಿರಾರು)

    ಪ್ರತ್ಯುತ್ತರಅಳಿಸಿ
  8. Slightly different take:)

    ಸರಳ ಸಜ್ಜನ ಮುಖದ ಭಸ್ಮನು
    ಮರುಳು ಮಾಡುತ ಶಿವನ ಕೇಳಿದ
    ವರವ ಕೊಡೆನಗೆ ಸುಡುವ ಹಸ್ತವ ಕೊರಡ ಸುಡಲೋಸುಗ
    ತರಳ ಮಾತಿಗೆ ತಲೆಯದೂಗುತ
    ಕರದಿ ಬತ್ತಿಯ ಹಿಡಿದು ಜನಸಾ
    ಗರವು ನೆರೆಯಲು ದಾರಿ ಕಾಣದೆ ಶಿವನು ಸಮ್ಮತಿಸಿದ.

    http://www.sandeepweb.com/2011/04/13/anna-hazardous/
    http://leagueofindia.com/blog/anna-hazare%E2%80%99s-campaign-truly-gandhian-truly-evil-%E2%80%93-i
    http://www.dailypioneer.com/330466/Weak-Government-subverted-state.html

    ಪ್ರತ್ಯುತ್ತರಅಳಿಸಿ
  9. ಶ್ರೀರವೀಂದ್ರರ ಊಹೆ ಚೆನ್ನಿದೆ
    ಮೂರು ಆರನೆ ಸಾಲುಗಳಬಂಧವನುಸರಿಮಾಡಿ /

    ಪ್ರತ್ಯುತ್ತರಅಳಿಸಿ